Email: svtemplehiriadka@gmail.com | Call: 0820-2542605, +91 9481440240

ಪೂರ್ವದಲ್ಲಿ ದಟ್ಟ ಕಾನನದ ಕವಚತೊಟ್ಟ ಸಿಂಹ ಗಾಂಭಿರ್ಯದ ಮಲಯ ಪರ್ವತ... ಪಶ್ಚಿಮದಲ್ಲಿ ನೀಲ್ಗಡಲ ಅಗಾಧ ಜಲರಾಶಿ.. ಇವೆರಡರ ನಡುವೆ ಭೂರಮೆಯ ನೆತ್ತಿಗಿಟ್ಟ ಸಿಂಧೂರದಂತೆ ಶೋಭಿಪ ಶ್ರೀಕ್ಷೇತ್ರ ಹಿರಿಯಡ್ಕ. ಇಲ್ಲಿದ್ದಾರೆ ಭಕ್ತರ ಅಭೀಷ್ಟ ಸಿದ್ಧಿಪ್ರದಾಯಕರಾದ ಶ್ರೀ ಬ್ರಹ್ಮಲಿಂಗೇಶ್ವರ ದೇವರು, ಸಾವಿರ ರುದ್ರಗಣಗಳ ಹಿಂಡಿನೊಡೆಯ ಶ್ರೀ ವೀರಭದ್ರ ಸ್ವಾಮಿ. ತೌಳವ ಪರಂಪರೆಯ ಕೀರ್ತಿಕಳಸಗಳಾದ ಅಬ್ಬಗ ದಾರಗ ಸಿರಿ ಕುಮಾರರು...

ಉಡುಪಿ ಜಿಲ್ಲೆಯ ಹಿರಿಯಡಕ ಕ್ಷೇತ್ರ ತುಳುವರ ಪ್ರಮುಖ ಆಲಡೆ ಕ್ಷೇತ್ರಗಳಲ್ಲಿ ಒಂದಾಗಿದೆ.ಈ ಕ್ಷೇತ್ರಕ್ಕೆ ಉಡುಪಿ, ಮಂಗಳೂರು, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಿಂದ ಭಕ್ತಾಧಿಗಳು ಆಗಮಿಸುತ್ತಾರೆ. ಇಲ್ಲಿ ಪ್ರಧಾನ ದೇವರು ಬ್ರಹ್ಮಲಿಂಗೇಶ್ವರ ಮತ್ತು ವೀರಭದ್ರ ಸ್ವಾಮಿ. ಇವರ ಜೊತೆಗೆ ಅನೇಕ ಪರಿವಾರ ಶಕ್ತಿಗಳು ಇಲ್ಲಿ ಆರಾಧನೆಗೊಳ್ಳುತ್ತಿವೆ. ಹಿಂದೆ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟು ಶ್ರೀಮಂತವಾಗಿದ್ದ ಈ ದೇವಾಲಯಕ್ಕೆ ಅಕ್ಕಪಕ್ಕದ ಸುಮಾರು ಹತ್ತು ಗ್ರಾಮದ ಜನರು ಭಯಭಕ್ತಿಯಿಂದ ನಡೆದುಕೊಳ್ಳುತ್ತಾರೆ.

ಈ ಕ್ಷೇತ್ರಕ್ಕೆ ಒಂದು ವೈಭವಶಾಲಿ ಇತಿಹಾಸವಿದ್ದು, ಸ್ಥಳೀಯ ಎರಡು ಮನೆತನಗಳು ಇಲ್ಲಿನ ದೇವರ ಕಾರ್ಯ ಇಂದಿನವರೆಗೆ ನಿರ್ವಿಘ್ನವಾಗಿ ನಡೆದುಕೊಂಡು ಬರುವಂತೆ ನೋಡಿ ಕೊಂಡಿವೆ. ಆಳ್ವ ಹೆಗಡೆ ಮತ್ತು ಕುರ್ಲ ಹೆಗಡೆ ಮನೆತನದವರ ಅನುವಂಶಿಕ ಆಡಳಿತದಲ್ಲಿ ಈ ಕ್ಷೇತ್ರ ಹಂತ ಹಂತವಾಗಿ ಬೆಳೆದುಬಂದಿದೆ. ಈ ಕ್ಷೇತ್ರದ ಶಕ್ತಿಗಳ ಕಾರಣೀಕ ಎಷ್ಟಿತ್ತು ಎಂದರೆ ಹಿಂದಿನಕಾಲದಲ್ಲಿ ಧರ್ಮಸ್ಥಳಕ್ಕೆ ಸಲ್ಲಿಕೆಯಾಗುವ ಕಾಣಿಕೆಯನ್ನು ಹಿರಿಯಡ್ಕದಲ್ಲಿ ಸ್ವೀಕರಿಸುತ್ತಿದ್ದರು. ಧರ್ಮಸ್ಥಳದ ಆಣೆ ಪ್ರಮಾಣಗಳನ್ನು ವೀರಭದ್ರನ ನಡೆಯಲ್ಲಿ ತೀರ್ಮಾನ ಮಾಡಿ ಪರಿಹಾರ ಪಡೆಯಲಾಗುತ್ತಿತ್ತು. ಆದರೆ ಹಿರಿಯಡ್ಕದ ನ್ಯಾಯವನ್ನು ಧರ್ಮಸ್ಥಳದಲ್ಲಿ ತೀರ್ಮಾನ ಮಾಡಲು ಸಾಧ್ಯವಿರಲಿಲ್ಲ. ಈ ರೀತಿ ಒಂದು ಕಾಲದಲ್ಲಿ ಧರ್ಮಸ್ಥಳದಷ್ಟೇ ಪ್ರಭಾವಶಾಲಿಯಾಗಿದ್ದ ದೇವಾಲಯವಿದು.

ಸ್ಥಳ ಪುರಾಣ

ತುಳುನಾಡಿನ ಎಲ್ಲಾ ಕಡೆಗಳಲ್ಲಿ ಇರುವಂತೆ ಹಿರಿಯಡಕದಲ್ಲೂ ಅತೀ ಪ್ರಾಚೀನ ಕಾಲದಲ್ಲಿ ಬೆರ್ಮರ ಆರಾಧನೆ ಮಾತ್ರವಿತ್ತು. ಪಂಚಶಕ್ತಿಗಳಾದ ಬೆರ್ಮರು, ನಾಗ, ರಕ್ತೇಶ್ವರಿ,ಕ್ಷೇತ್ರಪಾಲ ಮತ್ತು ಮಹಿಷಂತಾಯನ ಉಪಾಸನೆ ಇಲ್ಲಿ ಆರಂಭದಲ್ಲಿತ್ತು. ಆಗ ಇಲ್ಲಿ ವೀರಭದ್ರ ದೇವರು ಇರಲಿಲ್ಲ.ವೀರಭದ್ರ ಇಲ್ಲಿಗೆ ಬಂದ ಹಿನ್ನೆಲೆ ರೋಚಕವಾಗಿದೆ. ಈ ದೇವಾಲಯದಿಂದ ಕೆಲವೇ ದೂರದಲ್ಲಿರುವ ಪಡುಭಾಗ ಬೀಡಿನ ಆಳ್ವಹೆಗಡೆಯವರು ಈ ಬ್ರಹ್ಮಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದರು. ಈ ಪಂಚಶಕ್ತಿಗಳ ಆರಾಧನೆಗೆ ಅಡಕತ್ತಾಯ ಎಂಬ ಓರ್ವ ಬ್ರಾಹ್ಮಣ ಅರ್ಚಕರಿದ್ದರು. ಪ್ರತೀ ದಿನ ಬ್ರಹ್ಮಸ್ಥಾನದಲ್ಲಿ ಪೂಜೆ ನಡೆಸಿ ಬ್ರಹ್ಮರ ಪ್ರಸಾದವನ್ನು ಬೀಡಿನ ಹೆಗಡೆಗೆ ಕೊಟ್ಟು ಬರುವುದು ಇವರ ದಿನಚರಿಯಾಗಿತ್ತು. ಬೆರ್ಮರ ಪ್ರಸಾದ ಸ್ವೀಕರಿಸದೆ ಆಳ್ವಹೆಗಡೆ ಅನ್ನಾಹಾರ ಮುಟ್ಟುತ್ತಿರಲಿಲ್ಲ.

ಒಂದು ದಿನ ಯಾವುದೋ ಕಾರಣದಿಂದಾಗಿ ಅಡಕತ್ತಾಯರು ಪೂಜೆ ಮುಗಿಸಿ ಪ್ರಸಾದ ಕೊಂಡು ಹೋಗುವಾಗ ವೇಳೆ ಮೀರಿ ಹೋಯಿತು. ಆಳ್ವ ಹೆಗಡೆ ಕೋಪದಿಂದ ಕ್ಷುದ್ರನಾಗಿ ಅಡಕತ್ತಾಯರನ್ನು ತೀವ್ರವಾಗಿ ಅಪಮಾನಿಸಿದ. ಇದರಿಂದ ಮನನೊಂದ ಅಡಕತ್ತಾಯರು ಈ ಬ್ರಹ್ಮರಿಗಿಂತಲೂ ಶಕ್ತಿಶಾಲಿಯಾದ ದೇವರನ್ನು ತಂದು ಇಲ್ಲೇ ಸಮೀಪದಲ್ಲಿ ನಾನು ಸ್ಥಾಪಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿ ಘಟ್ಟ ಹತ್ತಿ ಬಾಳೆ ಹೊನ್ನೂರು ಸಮೀಪದ ಖಾಂಡ್ಯಕ್ಕೆ ತೆರಳುತ್ತಾರೆ. ಅಲ್ಲಿ ಘೊರ ತಪಸ್ಸಾಚರಿಸಿ ಅಲ್ಲಿನ ವೀರಭದ್ರನನ್ನು ಮೆಚ್ಚಿಸುತ್ತಾರೆ. ನನ್ನ ಜೊತೆಯಾಗಿ ನನ್ನ ಊರಿಗೆ ಬಂದು ನೆಲೆಯಾಗಬೇಕು ಎಂದು ಪ್ರಾರ್ಥಿಸುತ್ತಾರೆ. ಇದಕ್ಕೆ ಒಪ್ಪಿದ ವೀರಭದ್ರ ತನ್ನ ಸಹಸ್ರಾರು ರುದ್ರಗಣಗಳ ಜೊತೆ ಅಡಕತ್ತಾಯರ ಬೆನ್ನುಹಿಡಿದು ಘಟ್ಟದಿಂದ ಇಳಿದು ಬಂದ. ಆಗುಂಬೆ ಬಳಿ ಬರುತ್ತಿದ್ದಂತೆ ಅಲ್ಲಿ ಸುಂಕದ ಕಟ್ಟೆಯಲ್ಲಿ ಮಾಲಿ ಸುಮಾಲಿ ಎಂಬ ಇಬ್ಬರು ಕಾವಲಿನವರಿರುತ್ತಾರೆ. ಅವರಿಗೆ ಘಟ್ಟದ ಇಳಿಜಾರಿನ ಮೇಲಿನ ಸುತ್ತಿನಲ್ಲಿ ನೋಡಿದಾಗ ಸಾವಿರಾರು ದೊಂದಿಗಳು ಕಂಡವಂತೆ. ಆದರೆ ಸುಂಕದ ಕಟ್ಟೆಯಿಂದ ಒಬ್ಬ ಬ್ರಾಹ್ಮಣ ಮಾತ್ರ ಹಾದು ಹೋದ. ಸುಂಕದ ಕಟ್ಟೆ ಹಾದು ಎದುರು ನೋಡಿದರೆ ಬ್ರಾಹ್ಮಣನ ಹಿಂದೆ ಮತ್ತೆ ಸಾವಿರ ದೊಂದಿಗಳು ಜಗ್ಗನೆ ಉರಿದು ಸಾಗತೊಡಗಿತು. ಇದೆಂತಾ ವೈಚಿತ್ರ್ಯ ಎಂದು ಅವರಿಗೆ ಅಚ್ಚರಿಯಾಯಿತು. ಕುತೂಹಲಕ್ಕೆ ಬಿದ್ದ ಆ ಇಬ್ಬರು ಕಾವಲುಗಾರರು ದೊಂದಿಗಳನ್ನು ಹಿಂಬಾಲಿಸುತ್ತಾ ಬಂದರಂತೆ. ಹಿರಿಯಡಕಕ್ಕೆ ಬಂದ ಅಡಕತ್ತಾಯರು ಆಳ್ವ ಹೆಗಡೆ ಮತ್ತು ಅಂಜಾರು ಬೀಡು ಕುರ್ಲಹೆಗಡೆಯವರ ಸಹಕಾರದೊಂದಿಗೆ ವೀರಭದ್ರನಿಗೆ ಭವ್ಯವಾದ ಗುಡಿ ಮತ್ತು ಅವನ ಗಣಗಳಿಗೆ ಗಣಗಳ ಶಾಲೆಯನ್ನು ಸ್ಥಾಪಿಸಿದರಂತೆ. ಬ್ರಹ್ಮರು ಮತ್ತು ವೀರಭದ್ರನ ಸೇವೆ ಮಾಡುತ್ತಾ ಕಾಲ ಕಳೆದ ಅಡಕತ್ತಾಯರು ಬ್ರಹ್ಮೈಕ್ಯರಾಗಿ ದೈವೀಶಕ್ತಿಯಾದರು. ಅವರ ಸಾನಿಧ್ಯ ಇಂದಿಗೂ ಹಿರಿಯಡಕದಲ್ಲಿದೆ. ವೀರಭದ್ರನಿಗೆ ಮೂರು ಪೂಜೆಗಳಾದರೆ ಅಡಕತ್ತಾಯರಿಗೆ ಎರಡು ಪೂಜೆ ನಿತ್ಯವೂ ಸಲ್ಲಿಕೆಯಾಗುತ್ತದೆ. ರುದ್ರಗಣಗಳನ್ನು ಹಿಂಬಾಲಿಸುತ್ತಾ ಬಂದ ಆ ಕಾವಲುಗಾರರಾದ ಮಾಲಿ- ಸುಮಾಲಿಯವರೂ ದೇವಸ್ಥಾನದ ರಾಜಗೋಪುರದಲ್ಲಿ ಆರಾಧಿಸಲ್ಪಡುತ್ತಿದ್ದಾರೆ.

ಕ್ಷೇತ್ರ ಸನ್ನಿಧಾನಗಳು

ಹಿರಿಯಡಕದಲ್ಲಿ ಕಾಲಿಟ್ಟಲ್ಲೆಲ್ಲಾ ಶಕ್ತಿ ಸಾನಿಧ್ಯಗಳಿವೆ. ಎಂಟು ಶತಮಾನಗಳ ಮೊದಲು ಇಲ್ಲಿ ಕೇವಲ ಬ್ರಹ್ಮಸ್ಥಾನವಿತ್ತು. ಆ ಪುರಾತನ ಬ್ರಹ್ಮಸ್ಥಾನ ಇಂದಿಗೂ ಇದೆ. ಅದನ್ನು ಆದಿಬ್ರಹ್ಮರು ಎಂದು ಕರೆಯುತ್ತಾರೆ. ಆ ಗುಡಿಯ ಹೊರಭಾಗದಲ್ಲಿ ನೀಚ ದೈವದ ಸಾನಿಧ್ಯವಿದೆ. ಗರ್ಭಗುಡಿಯ ಮೂಲಪೀಠದಲ್ಲಿ ಒಟ್ಟು ಆರು ಸಂಕಲ್ಪಗಳಿದ್ದು, ಮೇಲಿನ ಅಂತರದಲ್ಲಿ ವಾಂಚಿತಾರ್ಥ, ಖಡ್ಗೇಶ್ವರ, ಚಂಡಿಕೆಯರಿದ್ದಾರೆ. ಕೆಳಗಿನ ಸ್ತರದಲ್ಲಿ ಅಬ್ಬಗ-ದಾರಗ ಮತ್ತು ನಡುವೆ ವೀರಭದ್ರಸ್ವಾಮಿಯ ವಿಗ್ರಹವಿದೆ. ಇದರ ಜೊತೆಗೆ ಶ್ರೀಚಕ್ರ, ಸ್ಪಟಿಕಲಿಂಗ, ಅನ್ನಪೂರ್ಣೇಶ್ವರಿ ಸಂಕಲ್ಪಿತ ಎರಡು ಬೆಳ್ಳಿಯ ಸಟ್ಟುಗಗಳು, ಮಾಧ್ವ ಅರ್ಚಕರ ಅನುಷ್ಟಾನಕ್ಕಾಗಿ ಇರಿಸಲಾದ ಲಕ್ಷ್ಮಿನರಸಿಂಹ ಮತ್ತು ವಾಸುದೇವ ಸಾಲಿಗ್ರಾಮಗಳು ಪೀಠದ ಕೆಳಗೆ ಪೂಜಿಸಲ್ಪಡುತ್ತಿವೆ. ಗರ್ಭಗುಡಿಯ ಹೊರಗೆ ಮಹಿಷಂತಾಯ ದೈವವಿದೆ. ಗರ್ಭಗುಡಿಯ ಹೊರಸುತ್ತಿನಲ್ಲಿ ನಾಗ ದೇವರ ಕಟ್ಟೆ ಮತ್ತು ಪಾರಿಜಾತ ಮರವಿದೆ. ಇದರ ಪಕ್ಕದಲ್ಲೇ ಬ್ರಹ್ಮಲಿಂಗೇಶ್ವರ ದೇವರ ಗುಡಿ ಇದೆ. ಇದರಲ್ಲಿ ಬ್ರಹ್ಮಲಿಂಗೇಶ್ವರ ದೇವರ ಎರಡು ಮೂರ್ತಿಗಳಿವೆ. ಒಂದು ಪ್ರತಿಷ್ಟಾಪಿತ ಮೂಲಬಿಂಬ, ಇನ್ನೊಂದು ಉತ್ಸವ ಬಲಿಮೂರ್ತಿ.ಈ ದೇವಾಲಯವನ್ನು ವೀರಭದ್ರ ಸ್ವಾಮಿ ದೇವಾಲಯ ಎಂದು ಜನರು ಕರೆದರೂ ಇಲ್ಲಿ ಉತ್ಸವ ಬಲಿ ರಥೋತ್ಸವ ಇತ್ಯಾದಿಗಳು ನಡೆಯುವುದು ಮಾತ್ರ ಬ್ರಹ್ಮಲಿಂಗೇಶ್ವರ ಸ್ವಾಮಿಗೆ.

ಶ್ರೀ ವೀರಭದ್ರ ದೇವರಿಗೆ ಇಲ್ಲಿ ಪ್ರತೀ ಸೋಮವಾರ ಸಂದರ್ಶನ ಸೇವೆ ನಡೆಯುತ್ತದೆ. ದೂರ ದೂರದ ಭಕ್ತರು ಬಂದು ದೇವರಿಂದ ಸಾಂತ್ವಾನದ ನುಡಿಯನ್ನು ಪಡೆದುಕೊಳ್ಳುತ್ತಾರೆ. ವೀರಭದ್ರ ದೇವರ ಆವರಣ ಬಿಟ್ಟು ಹೊರ ಬರುತ್ತಿದ್ದಂತೆ ರಾಜಗೋಪುರದಲ್ಲಿ ಘಂಟಾಕರ್ಣ, ಗಜಕರ್ಣ, ಮಾಲಿ ಸುಮಾಲಿ, ದಂಡಪಾಣಿ ಶೂಲಪಾಣಿ ಎಂಬ ರುದ್ರಗಣಗಳ ಸಂಕಲ್ಪವಿದೆ. ದ್ವಜಸ್ಥಂಬದ ಪಕ್ಕದಲ್ಲೇ ಭೂತರಾಜರ ಕಲ್ಲಮುಂಡಿಗೆ ಇದೆ. ಪ್ರದಕ್ಷಿಣಾ ಪಥದಲ್ಲಿ ಮುಂದುವರೆದ ಹಾಗೆ ಬೊಬ್ಬರ್ಯ ದೈವದ ಸಾನಿಧ್ಯ ಕಾಣಸಿಗುತ್ತದೆ. ಇದಾದ ಬಳಿಕ ಕ್ರಮವಾಗಿ ಪಿಲ್ಚಂಡಿ ದೈವದ ಗುಡಿ, ಗಣಗಳ ಶಾಲೆ, ರಕ್ತೇಶ್ವರಿ, ಅಡಕತ್ತಾಯರ ಗುಡಿ, ಕ್ಷೇತ್ರಪಾಲ ಗುಡಿಗಳು ಸಿಗುತ್ತವೆ. ಕ್ಷೇತ್ರಪಾಲನ ಮುಂಬಾಗದಲ್ಲಿ ಹಲವಾರು ರೀತಿಯ ಪರಿವಾರ ಶಕ್ತಿಗಳನ್ನು ಶಿಲಾಪೀಠದಲ್ಲಿ ಸ್ಥಾಪಿಸಿದ್ದಾರೆ. ಇವುಗಳ ಜೊತೆ ಪ್ರೇತಕಲ್ಲು ಕೂಡ ಇದೆ. ಕ್ಷೇತ್ರದ ವಿಶಾಲವಾದ ಕರೆಯ ದಂಡೆಯಲ್ಲಿ ಅತ್ಯಂತ ಪ್ರಾಚೀನ ನಾಗ ಬನವೊಂದಿದೆ.ಗಣಗಳ ಶಾಲೆಯಲ್ಲಿ ಇರುವ ರುದ್ರಗಣಗಳಲ್ಲಿ ಖಡ್ಗರಾವಣ ಮತ್ತು ನಂದಿಕೇಶ್ವರನಿಗೆ ಪ್ರಧಾನ ಪೂಜೆ ಇದೆ. ಈ ಖಡ್ಗರಾವಣನ ಬಳಿ ಹುಯಿಲು ಕೊಡುವ ಸಂಪ್ರದಾಯವಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಇನ್ನಷ್ಟು ದೈವಗಳು ದೇವಸ್ಥಾನದಿಂದ ಉತ್ತರಕ್ಕೆ ಕೊಂಚ ದೂರದಲ್ಲಿರುವ ಆಳುಗ್ಗೇಲ್ ಎಂಬ ಪ್ರದೇಶದಲ್ಲೂ ನೆಲೆ ನಿಂತಿವೆ . ಈ ಎಲ್ಲಾ ಸಾನಿಧ್ಯಗಳನ್ನು ಮೇಲ್ನೋಟಕ್ಕೆ ಗಮನಿಸಿದಾಗ ಈ ಕ್ಷೇತ್ರ ಅತ್ಯಂತ ಶಕ್ತಿಶಾಲಿಯಾದ ಅಡಕಕ್ಷೇತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆಲಡೆ ಕ್ಷೇತ್ರ

ತುಳುವರಿಗೆ ನಾಗ ಮತ್ತು ಬೆರ್ಮರು ಪ್ರಧಾನ ಆರಾಧನಾಶಕ್ತಿಗಳು. ಪ್ರತಿಯೊಂದು ತುಳುವ ಕುಟುಂಬಗಳಿಗೂ ಮೂಲ ನಾಗ ಮತ್ತು ಆದಿ ಆಲಡೆಗಳಿರುತ್ತವೆ. ಈ ಕ್ಷೇತ್ರಗಳಿಗೆ ತುಳುವರು ಪ್ರತೀವರ್ಷ ತಪ್ಪದೆ ನಡೆದುಕೊಳ್ಳುತ್ತಾರೆ. ಇವು ಕುಟುಂಬದ ತಾಯಿ ಬೇರುಗಳು ಎಂದರೂ ತಪ್ಪಾಗದು. ಕುಟುಂಬದಲ್ಲಿ ಯಾವುದೇ ಶುಭಕಾರ್ಯಗಳು ನಡೆದರೂ ಈ ಕ್ಷೇತ್ರಕ್ಕೆ ಬಂದು ಹರಿಕೆ ಸಲ್ಲಿಸಿ ಹೋಗುವ ಸಂಪ್ರದಾಯವಿದೆ. ಆಲಡೆಯನ್ನು ಉಪೇಕ್ಷಿಸಿದವರಿಗೆ ಸಂತಾನ ಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಆಲಡೆಗಳಲ್ಲಿ ನಾಗ ಬೆರ್ಮರ ಜೊತೆಗೆ ಸಿರಿ ಕುಮಾರರ ಆರಾಧನೆ ನಡೆಯುತ್ತದೆ. ಈ ಸಿರಿ ಕುಮಾರರ ಕತೆ ತುಳುನಾಡಿನ ಮಹಾಕಾವ್ಯ ಎಂದರೂ ತಪ್ಪಾಗದು. ಸತ್ಯನಾಪುರದ ಅಕ್ಕೆರಸು ಎನ್ನುವ ದೈವಾಂಶ ಸಂಭೂತ ಮಹಿಳೆಯ ಕತೆಯೇ ಈ ಸಿರಿ ಮಹಾಕಾವ್ಯ. ಈ ಕತೆಯಲ್ಲಿ ಬರುವ ಅಕ್ಕೆರಸು, ಆಕೆಯ ಮಗಳು ಸೊನ್ನೆ ,ಗಿಂಡೆ, ಮೊಮ್ಮಕ್ಕಳಾದ ಅಬ್ಬಗ ದಾರಗ, ಸವತಿಯಾದ ಸಾಮು, ಆಕೆಯ ಪರಿಚಾರಕಿ ದಾರು ಮಗ ಕುಮಾರ ಇವರೆಲ್ಲಾ ಮರಣಾ ನಂತರ ಅತಿಮಾನುಷ ಶಕ್ತಿಗಳಾಗಿ ಬದಲಾಗಿ ತುಳುನಾಡಿನ ಆಲಡೆಗಳಲ್ಲಿ ಸಾಮೂಹಿಕ ಆರಾಧನೆಗೆ ಒಳಪಟ್ಟಿದ್ದಾರೆ. ಇವರ ಸಾಮೂಹಿಕ ಆರಾಧನೆಯನ್ನೇ ಸಿರಿಜಾತ್ರೆ ಎಂದು ಕರೆಯುತ್ತಾರೆ.

ಆಲಡೆ ಕ್ಷೇತ್ರ

ತುಳುವರಿಗೆ ನಾಗ ಮತ್ತು ಬೆರ್ಮರು ಪ್ರಧಾನ ಆರಾಧನಾಶಕ್ತಿಗಳು. ಪ್ರತಿಯೊಂದು ತುಳುವ ಕುಟುಂಬಗಳಿಗೂ ಮೂಲ ನಾಗ ಮತ್ತು ಆದಿ ಆಲಡೆಗಳಿರುತ್ತವೆ. ತುಳುವರಿಗೆ ನಾಗ ಮತ್ತು ಬೆರ್ಮರು ಪ್ರಧಾನ ಆರಾಧನಾಶಕ್ತಿಗಳು. ಪ್ರತಿಯೊಂದು ತುಳುವ ಕುಟುಂಬಗಳಿಗೂ ಮೂಲ ನಾಗ ಮತ್ತು ಆದಿ ಆಲಡೆಗಳಿರುತ್ತವೆ. ಪ್ರತಿಯೊಂದು ತುಳುವ ಕುಟುಂಬಗಳಿಗೂ ಮೂಲ ನಾಗ ಮತ್ತು ಆದಿ ಆಲಡೆಗಳಿರುತ್ತವೆ.

ಸಿರಿಜಾತ್ರೆಯಲ್ಲಿ ನೂರಾರು ಮಹಿಳೆಯರು ಮಡಿಯುಟ್ಟು ಸಾಮೂಹಿಕವಾಗಿ ದೈವಾವೇಶಕ್ಕೆ ಒಳಗಾಗುತ್ತಾರೆ. ಕೆಲ ಕುಟುಂಬದ ಮಹಿಳೆಯರು ಅನುವಂಶಿಕವಾಗಿ ಈ ಪರಂಪರೆಯನ್ನು ನಡೆಸುತ್ತಾ ಬರುತ್ತಿದ್ದಾರೆ. ಉಡುಪಿಯಲ್ಲಿ ಪ್ರಸಿದ್ಧವಾದ ಆಲಡೆಗಳಾದ ಹಿರಿಯಡಕ, ನಂದಳಿಕೆ, ಪಾಂಗಾಳ, ಬೊಲ್ಯೊಟ್ಟು, ಕವತ್ತಾರು ಮೊದಲಾದ ಕ್ಷೇತ್ರಗಳಲ್ಲಿ ಅತ್ಯಂತ ವಿಜ್ರಂಭಣೆಯಲ್ಲಿ ಸಿರಿಜಾತ್ರೆ ನಡೆಯುತ್ತದೆ. ಹಿರಿಯಡಕದ ಸಿರಿಜಾತ್ರೆ ತುಳುನಾಡಿನ ಪ್ರಸಿದ್ಧ ಜಾತ್ರೆಗಳ ಪೈಕಿ ಒಂದಾಗಿದೆ.ಹಿರಿಯಡಕದಲ್ಲಿ ಪಗ್ಗು ತಿಂಗಳ ಹುಣ್ಣಿಮೆಗೆ ಸಿರಿಜಾತ್ರೆ ನಡೆಯುತ್ತದೆ. ಹಿರಿಯಡಕದಲ್ಲಿ ಪ್ರಧಾನ ಸಿರಿಗಳಾದ ಅಬ್ಬಗ ದಾರಗರು ವೀರಭದ್ರ ದೇವರ ಎಡಬಲದಲ್ಲಿ ನೆಲೆನಿಂತಿದ್ದಾರೆ.

ಕ್ಷೇತ್ರದ ವೈಶಿಷ್ಟ್ಯಗಳು

ಪೂರ್ವ ಕಾಲದಲ್ಲಿ ಇದು ಅತ್ಯಂತ ಶ್ರೀಮಂತ ದೇಗುಲವಾಗಿತ್ತು ಎನ್ನುವುದಕ್ಕೆ ಇಲ್ಲಿರುವ ವಾದ್ಯ ವೃಂದವೇ ಸಾಕ್ಷಿ. ಇಲ್ಲಿ ದೇವರ ನಿತ್ಯ ಪೂಜೆಗೆ ೧೬ ರೀತಿಯ ವಾದ್ಯಗಳನ್ನು ಹಿಂದೆ ಬಳಸಲಾಗುತ್ತಿತ್ತಂತೆ. ಅಷ್ಟೂ ಜನ ಚಾಕರಿಯವರ ಕುಟುಂಬಕ್ಕೆ ದೇವಸ್ಥಾನದಿಂದ ಉಂಬಳಿ ಬಿಟ್ಟ ಭೂಮಿಗಳಿದ್ದವು. ಇದರಲ್ಲಿ ಬಹುತೇಕ ವಾದ್ಯಗಳನ್ನು ಇಂದಿಗೂ ನುಡಿಸುತ್ತಿದ್ದಾರೆ. ಇಲ್ಲಿನ ನಗಾರಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಈ ನಗಾರಿಯ ದನಿ ಹಿಂದಿನ ಕಾಲದಲ್ಲಿ ಅಕ್ಕಪಕ್ಕದ ಗ್ರಾಮಗಳ ಜನರಿಗೆ ಸಮಯಸೂಚಕವಾಗಿತ್ತು. ಈ ದೇವಾಲಯಕ್ಕೆ ಸಾವಿರಾರು ಮುಡಿ ಅಕ್ಕಿ ಗೇಣಿ ಬರುತ್ತಿದ್ದರೂ ಇಲ್ಲಿನ ವೀರಭದ್ರ ದೇವರಿಗೆ ಇಂದಿಗೂ ನೈವೇದ್ಯ ಬಡಿಸುವುದು ಮಾತ್ರ ಹುಡಿ ಅವಲಕ್ಕಿಯನ್ನು. ಅಡಕತ್ತಾಯರು ವೀರಭದ್ರನನ್ನು ಮೊದಲು ತಂದು ಆರಾಧಿಸಿದಾಗ ಅವರು ಮನೆಮನೆಗಳಿಂದ ಬೇಡಿ ತಂಡ ಹುಡಿ ಅವಲಕ್ಕಿಯನ್ನೇ ಆತನಿಗೆ ಅರ್ಪಿಸಿದ್ದರಂತೆ. ವೀರಭದ್ರನಿಗೆ ಅದೇ ರುಚಿಯಾಯಿತು, ಮುಂದೆ ಇದೇ ಕಟ್ಟಳೆ ನಡೆದು ಬರಲಿ ಎಂದು ವೀರಭದ್ರನ ಅಪ್ಪಣೆಯಾಯಿತಂತೆ. ಹಿರಿಯಡಕದ ವೀರಭದ್ರ ಸ್ವಾಮಿಯ ಹೆಸರಲ್ಲಿ ಚಿಕ್ಕಮಗಳೂರು, ಶಿವಮೊಗ್ಗದ ಜನರು ಮುಡಿಪು ಕಟ್ಟಿಡುವ ಕ್ರಮವಿದೆ. ವೀರಭದ್ರ ದೇವರ ಹೆಸರಲ್ಲಿ ಒಂದು ಡಬ್ಬಿ ಇರಿಸಿ ಪ್ರತೀವರ್ಷ ಮುಷ್ಟಿ ಕಾಣಿಕೆ ಮತ್ತು ಏಲಕ್ಕಿಯನ್ನು ಅದಕ್ಕೆ ಹಾಕಿಡುತ್ತಾರೆ. ಅದು ತುಂಬಿದ ಬಳಿಕ ತಂದು ಕ್ಷೇತ್ರಕ್ಕೆ ಅರ್ಪಿಸುತ್ತಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ದ್ವಜಸ್ಥಂಬಗಳ ಪೈಕಿ ಅತೀ ಎತ್ತರದ ದ್ವಜಸ್ಥಂಭ ಹಿರಿಯಡಕದಲ್ಲಿದೆ ಇಲ್ಲಿ ಪೂಜೆ ಮಾಡುವವರು ಮಾಧ್ವ ಬ್ರಾಹ್ಮಣರಾದರೂ ಇಲ್ಲಿ ದೇವರಿಗೆ ಏಕಾದಶಿಯ ದಿನವೂ ನೈವೇದ್ಯ ಅರ್ಪಿಸಲಾಗುತ್ತದೆ.